ಕೇಳಿ ಕೇಳಿ ಸಾಕಾಗಿದೆ
ಅದೇ ಹಳೆಯ ಮಂತ್ರ
ತಂತ್ರ ಪ್ರತಿತಂತ್ರಗಳ
ನಡುವೆ ಒದ್ದಾಡುತ್ತಿದೆ ಸ್ವಾತಂತ್ರ್ಯ
ವರ್ಷ ವರ್ಷಕ್ಕೂ ಹೊಸ ಘೋಷಣೆ
ಕಾಣುತ್ತಿಲ್ಲ ಎಲ್ಲೂ ಸುಧಾರಣೆ
ಏರುತಿದೆ ವಸ್ತುಗಳ ಧಾರಣೆ
ನಿಂತಿಲ್ಲ ಬಡವರ ಶೋಷಣೆ
ಮಹಿಳೆಯರಿಗಿಲ್ಲ ರಕ್ಷಣೆ
ನಿಂತಿಲ್ಲ ವರದಕ್ಷಿಣೆ
ಅತ್ಯಾಚಾರಿಗಳಿಗಿಲ್ಲ ಎಣೆ
ಇದಕ್ಕೆಲ್ಲ ಯಾರು ಹೊಣೆ
ಇದ್ದರೂ ಸರ್ವ ಶಿಕ್ಷಾ ಅಭಿಯಾನ
ಹೆಚ್ಚುತ್ತಿಲ್ಲ ಮಕ್ಕಳ ಜ್ಞಾನ
ಕುಂಟುತ್ತಿದೆ ಸಾಕ್ಷರತೆ ಪ್ರಮಾಣ
ಆಗುತಿದೆಯೇ ನಿರಕ್ಷರಿಗಳ ತಾಣ
ಅತ್ತ ಉರಿಯುತಿದೆ ಗಡಿ
ನಿಂತಿಲ್ಲ ಭಯೋತ್ಪಾದನೆಯ ಕಿಡಿ
ಅಲ್ಲಿ ಯೋಧರ ಮರಣ
ಮಾತುಕತೆಯಲ್ಲಿ ಮಾಡುತಿರುವರು ಕಾಲಹರಣ
ಎಲ್ಲರಿಗೂ ಸಮಬಾಳು, ಎಲ್ಲರಿಗೂ ಸಮಪಾಲು
ಪ್ರತಿಯೊಂದು ಯೋಜನೆಗೂ ಬೇಕು ಅವರವರ ಪಾಲು
ಇಲ್ಲದಿದ್ದರೆ ಎಲ್ಲ ಕೆಲಸಕೂ ಕಾಲು
ನೋಡುತಿರುವೆವು ಕಛೇರಿಗಳಲಿ ಉದ್ದನೆಯ ಸಾಲು
ಒಂದೆಡೆ ಇಳಿಯುತಿದೆ ಅಂತರ್ಜಲ
ಹೆಚ್ಚುತ್ತಿದೆ ವರ್ಷ ವರ್ಷವೂ ಬರಗಾಲ
ರೈತರ ಬಾಳಲಿದೆ ಬರಿ ಸಾಲ
ಕುಡಿಯುವಂತೆ ಮಾಡಿದೆ ಹಾಲಾಹಲ
ಆದರೂ ಇದೆ ಸಾಧಿಸುವ ಛಲ
ಇದೆ ತೋಳುಗಳಲ್ಲಿ ಬಲ
ನಮ್ಮ ಶಕ್ತಿಯಲ್ಲಿದೆ ನಂಬಿಕೆ
ದಯೆ ತೋರುವಳು ಅಂಬಿಕೆ
No comments:
Post a Comment